12ನೇ ಶತಮಾನದಲ್ಲಿಯೇ ಜಾತಿ-ಮತ ಭೇದವಿಲ್ಲದೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯಲಬುರ್ಗಾ ಪಟ್ಟಣದ ಶ್ರೀ ಶ್ರೀಧರ ಮೂರಡಿ ಹೀರೆಮಠದ ಶ್ರೀ ಬಸವಲಿಂಗೇಶ್ವರ ಸ್ವಾಮಿಜಿ ಹೇಳಿದರು.
ಪಟ್ಟಣದ ಶ್ರೀ ಮೂಗ್ಗಿ ಬಸವೇಶ್ವರ ಜಾತ್ರೆಯ ನಿಮಿತ್ತ ಆಯೋಜಿಸಲಾಗಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. “ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ” ಸಮಾನತೆಯ ಚಿಂತನೆ ಬಸವಣ್ಣನವರದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ “ಕಾಯಕವೇ ಕೈಲಾಸ” ಎಂಬ ಅವರ ಮಹತ್ವದ ತತ್ವವನ್ನು ಜೀವನದಲ್ಲಿ ಅನುಸರಿಸಬೇಕು ಎಂದು ತಿಳಿಸಿದರು. ಅಂದಿನ ಅನುಭವ ಮಂಟಪವು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯವಾಗಿದ್ದು, ಬಸವಣ್ಣನವರ ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ 20 ಜೋಡಿಗಳ ಸಾಮೂಹಿಕ ವಿವಾಹಗಳು ನೆರವೇರಿದವು.
ಈ ಸಂದರ್ಭದಲ್ಲಿ ಮೂಗ್ಗಿ ಬಸವೇಶ್ವರ ಗೌರವ ಅಧ್ಯಕ್ಷ ಶೇಖರಗೌಡ ಉಳಗಡ್ಡಿ, ಈರಪ್ಪ ಕುಡಗುಂಟಿ, ವೀರನಗೌಡ ಬನ್ನಪಗೌಡರ, ಸಂಗಣ್ಣ ತೇಂಗಿನಕಾಯಿ, ಮೈಲಾರಗೌಡ ತಳವಗೇರಿ, ಮಂಜುನಾಥ ಅಧಿಕಾರಿ, ಸುರೇಶಗೌಡ ಶಿವನಗೌಡರ, ಅಂಬರೇಶ ಹುಬ್ಬಳ್ಳಿ, ದೊಡ್ಡಯ್ಯ ಗುರವಿನ, ಕರಸಿದ್ದಪ್ಪ ಮುಳಗುಂದ, ಕಲ್ಲನಗೌಡ ಓಜಿನಹಳ್ಳಿ, ಬಸವರಾಜ ಅಧಿಕಾರಿ, ಷಣ್ಮುಖಪ್ಪ ರಾಂಪೂರ, ಶರಣಗೌಡ ಕೊಡಗಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
