ಜಗಜ್ಯೋತಿ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ, ಶ್ರಮದ ಗೌರವ, ದಾಸೋಹ, ಸತ್ಯನಿಷ್ಠೆ, ಸಹೋದರತ್ವ ಮುಂತಾದ ಶ್ರೇಷ್ಠ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಇವುಗಳನ್ನು ಕೇವಲ ಕೇಳುವುದಲ್ಲ, ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಾಲಚಂದ್ರ ಸಾಲಭಾವಿ ಲಿಂಗನಬಂಡಿ ಹೇಳಿದರು.
ತಾಲೂಕಿನ ಮಂಡಲಮರಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಆದಿಶಕ್ತಿ ಯುವ ನಾಟ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಧರ್ಮ ತುಂಬಿದ ಮನೆ” ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾಟಕವೆಂಬುದು ಕೇವಲ ಮನರಂಜನೆಗೆ ಸೀಮಿತವಾಗಿರುವ ಮಾಧ್ಯಮವಲ್ಲ. ಅದು ಸಮಾಜದ ಅಸಲಿ ಮುಖವನ್ನು ಪ್ರತಿಬಿಂಬಿಸುವ ಕನ್ನಡಿ. ಜನರ ಬದುಕಿನಲ್ಲಿ ನಡೆಯುತ್ತಿರುವ ಸಮಸ್ಯೆಗಳು, ಮೌಲ್ಯಗಳ ಕುಸಿತ, ಕುಟುಂಬ ಸಂಬಂಧಗಳ ಬದಲಾವಣೆ ಇವೆಲ್ಲವನ್ನು ವೇದಿಕೆಯ ಮೇಲೆ ಜೀವಂತವಾಗಿ ತೋರಿಸುವ ಶಕ್ತಿಯುತ ಸಾಧನವಾಗಿದೆ. “ಧರ್ಮ ತುಂಬಿದ ಮನೆ” ಎಂಬ ಶೀರ್ಷಿಕೆಯೇ ಈ ನಾಟಕದ ಅರ್ಥವನ್ನು ಬಹಳ ಸ್ಪಷ್ಟವಾಗಿ ತೋರಿಸುತ್ತದೆ. ಒಂದು ಕುಟುಂಬದಲ್ಲಿ ಧರ್ಮ, ನೀತಿ, ನೈತಿಕತೆ ಇದ್ದರೆ ಆ ಮನೆ ಮಾತ್ರವಲ್ಲ, ಸಮಸ್ತ ಸಮಾಜವೂ ಸುಸ್ಥಿರವಾಗಿರುತ್ತದೆ ಎಂಬ ಸಂದೇಶವನ್ನು ಇದು ಸಾರುತ್ತದೆ ಎಂದು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ಭೌತಿಕ ಸುಖ-ಸೌಕರ್ಯಗಳಿಗೆ ಹೆಚ್ಚು ಮಹತ್ವ ನೀಡುತ್ತಿರುವ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು ಹಿಂಬದಿಗೆ ಸರಿಯುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಯುವಕರು ಸಮಾಜಮುಖಿ ನಾಟಕಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಚಿಂತನೆಗಳನ್ನು ಬೆಳೆಸಲು ಹಾಗೂ ಒಗ್ಗಟ್ಟಿನ ಸಮಾಜ ನಿರ್ಮಾಣಕ್ಕೆ ದಾರಿಯಾಗುತ್ತವೆ ಎಂದು ಹೇಳಿದರು. ಯುವ ಕಲಾವಿದರು ತಮ್ಮ ಪ್ರತಿಭೆಯನ್ನು ಕೇವಲ ಮನರಂಜನೆಗೆ ಮಾತ್ರ ಬಳಸದೆ, ಸಮಾಜ ಸುಧಾರಣೆಯ ದಿಕ್ಕಿನಲ್ಲಿ ಬಳಸುತ್ತಿರುವುದು ಸಂತೋಷದ ಸಂಗತಿ. ಇವರು ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ನಾಟಕಗಳನ್ನು ಪ್ರದರ್ಶಿಸಿ ಜನರಲ್ಲಿ ಸದ್ಭಾವನೆ, ಸತ್ಯನಿಷ್ಠೆ ಹಾಗೂ ಧರ್ಮದ ಅರಿವು ಮೂಡಿಸಲಿ ಎಂದು ಆಶಿಸಿದರು. ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿ, ಆಧುನಿಕ ಜೀವನ ಶೈಲಿಯ ಒತ್ತಡದಲ್ಲಿ ಜನರು ತಮ್ಮ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳನ್ನು ಮರೆತು ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಸಂದರ್ಭಗಳಲ್ಲಿ ನಾಟಕಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವುದು ಅತ್ಯಂತ ಅಗತ್ಯವಾಗಿದೆ. ಇವು ಯುವಜನತೆಗೆ ದಾರಿದೀಪವಾಗುತ್ತವೆ ಎಂದು ಹೇಳಿದರು.
ಅಪರ ಸರಕಾರಿ ವಕೀಲ ಮಲ್ಲನಗೌಡ ಪೋಲಿಸಪಾಟೀಲ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಅನೇಕ ಸಮಸ್ಯೆಗಳ ಮೂಲವೇ ಮೌಲ್ಯಗಳ ಕೊರತೆಯಾಗಿದೆ. ಇಂತಹ ನಾಟಕಗಳು ಜನರಲ್ಲಿ ಅರಿವು ಮೂಡಿಸಿ, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಿದ್ದ ಮಕ್ಕಳ್ಳಿ ಶಿವಾನಂದಮಠದ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಧರ್ಮ, ಸತ್ಯ, ಪ್ರೀತಿ ಮತ್ತು ಸಹಕಾರ ಎಂಬ ನಾಲ್ಕು ಸ್ತಂಭಗಳ ಮೇಲೆ ಸಮಾಜ ನಿಂತಿದೆ. ಇವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಶಾಂತಿಯುತ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣ ಸಾಧ್ಯ. ಬಸವಣ್ಣನವರ ತತ್ವಗಳನ್ನು ಅನುಸರಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಮೂರ್ತಿ ವೀರಯ್ಯ ಹಿರೇಮಠ, ಪಾರ್ವತೆಮ್ಮ ಹನುಮಾಪೂರ, ಶರಣಪ್ಪ ಗೂಂಗಾಡಿ, ಗುಂಡನಗೌಡ ಸಾಲಭಾವಿ, ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲು ಮಾಟರಂಗಿ, ಇಂಜಿನಿಯರ್ ಮಹಾಂತೇಶ ಹಳ್ಳಿ (ಕುಷ್ಟಗಿ), ಶರಣಪ್ಪ ಕತ್ತಿ, ಶಂಕರ ಮೂಲಿ, ಸೋಮಲಿಂಗಪ್ಪ ಕುರಿ, ಹುಲಿಗೆಮ್ಮ ಹರಿಜನ, ಶಿವಪ್ಪ ಪಟ್ಟೇದ, ಎಂ.ಎಚ್. ಪತ್ತಾರ, ದೇವಪ್ಪ ಹೊಸೂರು, ರಾಮಣ್ಣ ಹಳ್ಳಿ, ಮಾರುತಿ ಮಾಟರಂಗಿ, ಸಿದ್ದಪ್ಪ ಭಾವಿ, ಉಮೇಶಪ್ಪ ಜೂಲಕಟ್ಟಿ, ಬಸವರಾಜ ಹೊಸಮನಿ, ಸಂತೋಷ ಭೋವಿ,ಗೌಡಪ್ಪ ಬಿಂಗಿ, ಯಮನಪ್ಪ ಸೇರಿದಂತೆ ಇತರರು ಇದ್ದರು.
ತಾಲೂಕಿನ ಮಂಡಲಮರಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆದಿಶಕ್ತಿ ಯುವ ನಾಟ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಧರ್ಮ ತುಂಬಿದ ಮನೆ” ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮುಖಂಡ ಬಾಲಚಂದ್ರ ಸಾಲಭಾವಿ ಮಾತನಾಡಿದರು.
