ಯಲಬುರ್ಗಾ: ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಪ್ರಮೀಳಾ ಎಂ. ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಅರಣ್ಯ ನಾಶ ಮತ್ತು ಹವಾಮಾನ ವೈಪರೀತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಪಚ್ಚಪುರೆ ಮಾತನಾಡಿ, ಪರಿಸರ ಸಂರಕ್ಷಣೆಯು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರ ನಿತ್ಯ ಜೀವನದ ಭಾಗವಾಗಬೇಕು. ಮರಗಳು ಜೀವ ಸಂಕುಲದ ಆಧಾರವಾಗಿದ್ದು, ಅವುಗಳ ಸಂರಕ್ಷಣೆಯಿಂದ ಮಾತ್ರ ಸ್ವಚ್ಛ ಗಾಳಿ, ಸಮರ್ಪಕ ಮಳೆ ಹಾಗೂ ಆರೋಗ್ಯಕರ ಬದುಕು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಹಸಿರು ವಾತಾವರಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಹೊಂಬಾಳ್, ತಹಸೀಲ್ದಾರ್ ಪ್ರಕಾಶ್ ನಾಸಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ಅಸೂಟಿ, ವಲಯ ಅರಣ್ಯಾಧಿಕಾರಿ ಬಸವರಾಜ್ ಗೋಗಿರಿ, ಬಾಬುರಾವ್, ವಕೀಲರಾದ ಸಿ.ಎಸ್. ಬನ್ನಪ್ಪಗೌಡ್ರು, ಎಸ್.ಸಿ. ಗದಗ್, ಆರ್.ಜಿ. ನಿಂಗೋಜಿ, ಅಯ್ಯರ್ ಕೆಂಚಮ್ಮನವರ್, ಜಿ.ಕೆ. ಲಾಲಗೊಂಡರು, ಎ.ಎಂ. ಪಾಟೀಲ್, ಕೆ.ಆರ್. ಬೆಟಿಗೇರಿ, ಎಸ್.ಜಿ. ಅಂಗಡಿ, ಸಾವಿತ್ರಿ ಗೊಲ್ಲರು, ಎ.ಬಿ. ಬೋರಣ್ಣವರ್, ಬಸವರಾಜ್ ಕಡಬಲಕಟ್ಟಿ, ಮಂಜುನಾಥ್ ಕಮ್ಮಾರ್ ಹಾಗೂ ಸಮಿತಿಯ ಸಿಬ್ಬಂದಿಗಳಾದ ರಾಘವೇಂದ್ರ ಕೋಳಿಹಾಳ್ ಮತ್ತು ವಿನಾಯಕ್ ಉಪಸ್ಥಿತರಿದ್ದರು.
