ಶಿವಾನುಭವದಿಂದ ಶಾಂತಿ,ನೆಮ್ಮದಿ ಲಭಿಸುತ್ತವೆ
ಯಲಬುರ್ಗಾ ಕಾನೂನು” ಎಂದರೆ ನಮಗೆ ಸರ್ಕಾರದ ನಿಯಮಗಳು, ನ್ಯಾಯಾಲಯ, ಶಿಕ್ಷೆ ಇತ್ಯಾದಿ ನೆನಪಿಗೆ ಬರುತ್ತವೆ. ಆದರೆ ಆಧ್ಯಾತ್ಮದಲ್ಲಿಯೂ ಒಂದು ವಿಧದ ಕಾನೂನು ಇದೆ. ಅದು ಹೊರಗಿನ ಕಾನೂನು ಅಲ್ಲ, ಅದು ಮನಸ್ಸಿನ, ಆತ್ಮದ ಮತ್ತು ಧರ್ಮದ ಕಾನೂನು ಎಂದು ವಕೀಲರಾದ ವೀರಣ್ಣ ತಳಕಲ್ ಹೇಳಿದರು.
ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಶುಕ್ರವಾರ ಆದಿಶಕ್ತಿ ಅಗ್ರಮ್ಮ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ನಮ್ಮೂರ 60 ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಕಾನೂನು ಅರಿವು ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಆಧ್ಯಾತ್ಮದಲ್ಲಿ ಮುಖ್ಯವಾದ ಕಾನೂನು ಎಂದರೆ ಧರ್ಮ. ಧರ್ಮ ಎಂದರೆ ಸತ್ಯ, ನ್ಯಾಯ, ಒಳ್ಳೆಯ ನಡೆ-ನುಡಿ. ನಾವು ಸತ್ಯದ ಮಾರ್ಗದಲ್ಲಿ ನಡೆದರೆ ಅದು ಆಧ್ಯಾತ್ಮದ ಕಾನೂನನ್ನು ಪಾಲಿಸಿದಂತಾಗುತ್ತದೆ, ಶಿವಾನುಭವ” ಎಂದರೆ ನಮ್ಮ ಒಳಮನಸ್ಸಿನಲ್ಲಿ ಶಿವತತ್ವವನ್ನು ಅರಿತುಕೊಳ್ಳುವುದು. ಶಿವನು ಶಾಂತಿ, ಸತ್ಯ, ಸಮತೆ ಮತ್ತು ಧರ್ಮದ ಪ್ರತೀಕ. ಈ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಿಜವಾದ ಶಿವಾನುಭವ ಸಿಗುತ್ತದೆ. “ಕಾನೂನು ಅರಿವು” ಎಂದರೆ ಸಮಾಜದಲ್ಲಿ ನಾವು ಹೇಗೆ ಬದುಕಬೇಕು, ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು. ಕಾನೂನು ನಮ್ಮನ್ನು ನಿಯಂತ್ರಿಸಲು ಮಾತ್ರವಲ್ಲ, ನಮ್ಮನ್ನು ರಕ್ಷಿಸಲು ಕೂಡ ಇದೆ ಎಂದರು.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಬೆಳೆಸಲು ಧಾರ್ಮಿಕ ಹಾದಿಯಲ್ಲಿ ಸಾಗುವುದು ಅಗತ್ಯವಾಗಿದೆ, ಸಮಾಜದಲ್ಲಿ ಶಾಂತಿ ಮತ್ತು ನ್ಯಾಯ ಕಾಪಾಡಲು ಕಾನೂನು ಅರಿವು ಅತ್ಯಂತ ಅಗತ್ಯವಾಗಿದೆ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಕಾನೂನು ಅರಿವು ಇಲ್ಲದಿರುವುದರಿಂದ ಅನೇಕರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಣದ ಹಕ್ಕು, ಮಹಿಳಾ ಹಾಗೂ ಮಕ್ಕಳ ರಕ್ಷಣೆ, ಸಮಾನತೆ ಮತ್ತು ನ್ಯಾಯದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಕಾನೂನು ತಿಳಿದಿರುವವರು ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲು ಮಾಟರಂಗಿ ಮಾತನಾಡಿ ಅಗ್ರದಮ್ಮದೇವಿಯ ಕೃಪೆಯಿಂದ ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಭಕ್ತರಲ್ಲಿ ಹೊಸ ಶಕ್ತಿ, ಹೊಸ ನಂಬಿಕೆ ಮತ್ತು ಹೊಸ ಚೈತನ್ಯವನ್ನು ತುಂಬುತ್ತದೆ. ಭಕ್ತರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಸಮಾಜದಲ್ಲಿ ಒಳ್ಳೆಯ ಮೌಲ್ಯಗಳು ಬೆಳೆಯುತ್ತವೆ.
ಇಂದಿನ ಯುಗದಲ್ಲಿ ಮಾನಸಿಕ ಒತ್ತಡ, ಸಮಸ್ಯೆಗಳು ಹೆಚ್ಚಾಗಿರುವಾಗ ಇಂತಹ ಕಾರ್ಯಕ್ರಮಗಳು ನಮಗೆ ಮನಶಾಂತಿ ಮತ್ತು ಧೈರ್ಯ ನೀಡುತ್ತವೆ. ವಿಶೇಷವಾಗಿ ಯುವಕರಿಗೆ ಇದು ಸನ್ಮಾರ್ಗದ ದಾರಿ ತೋರಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ ಮಾತನಾಡಿ ಸಮಾಜದ ಸುವ್ಯವಸ್ಥೆ ಮತ್ತು ಉತ್ತಮ ಭವಿಷ್ಯ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಸಂಸ್ಕಾರಗಳನ್ನು ನೀಡುವುದು ಅವಶ್ಯಕ, ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಮೇಲೆ ಮೊಬೈಲ್, ಟಿವಿ ಮತ್ತು ಹೊರಗಿನ ಪ್ರಭಾವ ಹೆಚ್ಚುತ್ತಿರುವುದರಿಂದ, ತಾಯಂದಿರು ಮಕ್ಕಳಿಗೆ ನೈತಿಕ ಮೌಲ್ಯಗಳು, ಶಿಷ್ಟಾಚಾರ ಮತ್ತು ಮಾನವೀಯತೆ ಬಗ್ಗೆ ತಿಳಿಸಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಸತ್ಯ, ಪ್ರಾಮಾಣಿಕತೆ, ಹಿರಿಯರಿಗೆ ಗೌರವ, ಶಿಸ್ತು ಹಾಗೂ ಸಮಾಜದ ಹೊಣೆಗಾರಿಕೆಗಳ ಬಗ್ಗೆ ಅರಿವು ಮೂಡಿಸುವುದು ತಾಯಂದಿರ ಮುಖ್ಯ ಕರ್ತವ್ಯವಾಗಿದೆ. ಉತ್ತಮ ಸಂಸ್ಕಾರ ಹೊಂದಿದ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ನಾಗರಿಕರಾಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಅಗ್ರದಮ್ಮದೇವಿ ನಮ್ಮ ಸಂಕಷ್ಟಗಳಲ್ಲಿ ಆಶ್ರಯವಾಗುತ್ತಾಳೆ. ಕಷ್ಟದ ಸಮಯದಲ್ಲಿ ದೇವಿಯನ್ನು ಸ್ಮರಿಸಿದಾಗ ನಮಗೆ ಧೈರ್ಯ ಮತ್ತು ಆಶಾಭಾವನೆ ದೊರಕುತ್ತದೆ. ಆದ್ದರಿಂದ, ನಾವು ದೇವಿಯ ಮೇಲಿನ ನಂಬಿಕೆಯನ್ನು ಸದಾ ಉಳಿಸಿಕೊಳ್ಳಬೇಕು ಎಂದರು..
ಈ ಸಂದರ್ಭದಲ್ಲಿ ಮಹಾದೇವಯ್ಯ ಹಿರೇಮಠ, ರಾಜಶೇಖರಯ್ಯ ಹಿರೇಮಠ,ಬಸಪ್ಪ ಕುದ್ರಿಕೋಟಗಿ, ದುರಗಪ್ಪ ನಡುವಿನಮನಿ, ಮಹಾದೇವಯ್ಯ ಬಸಯ್ಯ ಹಿರೇಮಠ, ಮಂಗಳೇಶ ಶ್ಯಾಗೋಟಿ,. ಬಸವರಾಜ ಮಾಲಿಗೌಡ್ರ, ರುದ್ರಯ್ಯ ಹಿರೇಮಠ, ಕುಬೇರಪ್ಪ ತೋಪಲಕಟ್ಟಿ, ಕಳಕನಗೌಡ ಪಾಟೀಲ, ಶ್ರಿಶೈಲ ಚಿಕ್ಕೊಪ್ಪದ, ಮಲ್ಲಪ್ಪ ಬಡಿಗೇರ, ಕುಮಾರ ಯರಿಗೇರಿ ಸೇರಿದಂತೆ ಗ್ರಾಮದ ಗುರು-ಹಿರಿಯರು,ಯುವಕರು ಇದ್ದರು.
ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ವಕೀಲ ವೀರಣ್ಣ ತಳಕಲ್ ಮಾತನಾಡಿದರು.
