ಬೆಂಗಳೂರು: "ದಕ್ಷಿಣ ಮತ್ತು ಮಧ್ಯ ಭಾರತವನ್ನು ಪ್ರವೇಶಿಸಿ ಭಾರಿ ಭರವಸೆ ಮೂಡಿಸಿದ್ದ ನೈರುತ್ಯ ಮುಂಗಾರು ಇದ್ದಕ್ಕಿದ್ದಂತೆ ಮಾಯವಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಸ್ಥಗಿತವಾಗಿವೆ.
ಮುಂಗಾರು ಮಳೆಯ ಚಟುವಟಿಕೆಗಳು ಗಣನೀಯವಾಗಿ ಕುಸಿದಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ (IMD) ದತ್ತಾಂಶಗಳು ಹಾಗೂ ಇತ್ತೀಚಿನ ಉಪಗ್ರಹ ಚಿತ್ರಗಳು ದೃಢಪಡಿಸಿವೆ. ಜೂನ್ 4 ರಿಂದ ಜೂನ್ 15ರವರೆಗಿನ ಅವಧಿಯಲ್ಲಿ ದೇಶಾದ್ಯಂತ ವಾಡಿಕೆಯಾಗಿ 53.7 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 19.2 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ. 64ರಷ್ಟು ಭಾರಿ ಮಳೆ ಕೊರತೆಯುಂಟಾಗಿದೆ. ಇದು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಆತಂಕವನ್ನು ಸೃಷ್ಟಿಸಿದೆ.
ಹವಾಮಾನ ಇಲಾಖೆಯ ‘INSAT-3DS’ ಉಪಗ್ರಹವು ಜೂನ್ 15ರಂದು ಸೆರೆಹಿಡಿದಿರುವ ಚಿತ್ರಗಳಲ್ಲಿ ಮುಂಗಾರು ವೈಫಲ್ಯದ ನೈಜ ಚಿತ್ರಣ ಗೋಚರಿಸಿದೆ. ವಾಡಿಕೆಯಂತೆ ಈ ಸಮಯದಲ್ಲಿ ಪರ್ಯಾಯ ದ್ವೀಪ ಹಾಗೂ ಮಧ್ಯ ಭಾರತದ ಮೇಲೆ ದಟ್ಟವಾದ ಮುಂಗಾರು ಮೋಡಗಳು ಆವರಿಸಿರಬೇಕಿತ್ತು. ಆದರೆ, ಪ್ರಸ್ತುತ ಉಪಗ್ರಹ ಚಿತ್ರಗಳಲ್ಲಿ ಈ ಭಾಗಗಳು ಸಂಪೂರ್ಣವಾಗಿ ಮೋಡ ಮುಕ್ತವಾಗಿರುವುದು ಕಂಡುಬಂದಿದೆ. ಹಿಮಾಲಯ, ಈಶಾನ್ಯ ಭಾರತ ಮತ್ತು ಇಂಡೋ-ಗಂಗಾ ಬಯಲಿನ ಉತ್ತರದ ಭಾಗಗಳಲ್ಲಿ ಮಾತ್ರ ಮೋಡಗಳ ಚಟುವಟಿಕೆ ಸೀಮಿತವಾಗಿದೆ. ಅರೇಬಿಯನ್ ಸಮುದ್ರದಿಂದ ಬೀಸುವ ಮುಂಗಾರು ಮಾರುತಗಳು ತೀರಾ ದುರ್ಬಲಗೊಂಡಿರುವುದು ಈ ಚಿತ್ರಗಳಿಂದ ಸ್ಪಷ್ಟವಾಗಿದೆ.
ಈ ಹವಾಮಾನ ವೈಪರೀತ್ಯಕ್ಕೆ ಸಮುದ್ರದಲ್ಲಿನ ತೇವಾಂಶದ ಕೊರತೆ ಕಾರಣವಲ್ಲ, ಬದಲಾಗಿ ವಾತಾವರಣದ ಮೇಲ್ಪದರದಲ್ಲಿ ನಡೆಯುತ್ತಿರುವ ಬದಲಾವಣೆಗಳೇ ಮುಖ್ಯ ಕಾರಣ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ. ವಾತಾವರಣದ ಮೇಲ್ಭಾಗದಲ್ಲಿ ವೇಗವಾಗಿ ಚಲಿಸುವ ಗಾಳಿಯ ಪ್ರವಾಹವಾದ ‘ವೆಸ್ಟರ್ಲಿ ಜೆಟ್ ಸ್ಟ್ರೀಮ್’ (ಪಶ್ಚಿಮದ ಗಾಳಿ) ವಾಡಿಕೆಗಿಂತ ಹೆಚ್ಚು ದಕ್ಷಿಣಕ್ಕೆ ಚಲಿಸಿದೆ. ಇದು ಮುಂಗಾರು ಮಾರುತಗಳಿಗೆ ಶಕ್ತಿ ತುಂಬುವ ‘ಈಸ್ಟರ್ಲಿ ಜೆಟ್ ಸ್ಟ್ರೀಮ್’ (ಪೂರ್ವದ ಗಾಳಿ) ವ್ಯವಸ್ಥೆಗೆ ಅಡ್ಡಿಯುಂಟುಮಾಡುತ್ತಿದೆ. ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಸಾಕಷ್ಟು ತೇವಾಂಶವಿದ್ದರೂ, ಈ ಬಲವಾದ ಪಶ್ಚಿಮದ ಗಾಳಿಯು ಮೋಡಗಳ ರಚನೆಗೆ ಮತ್ತು ಮಳೆ ಸುರಿಯಲು ಅಡ್ಡಿಯಾಗುತ್ತಿದೆ.
ಹವಾಮಾನ ತಜ್ಞರು ಪ್ರಸ್ತುತ ಈ ವಿದ್ಯಮಾನವನ್ನು ‘ತಾತ್ಕಾಲಿಕ ಮುಂಗಾರು ವಿರಾಮ’ ಎಂದು ಕರೆದಿದ್ದಾರೆ. ನಕ್ಷೆಯಲ್ಲಿ ಮುಂಗಾರು ಮಾರುತಗಳು ಮುಂದಡಿ ಇಟ್ಟಂತೆ ಕಂಡರೂ, ವಾಸ್ತವದಲ್ಲಿ ಮಳೆ ಸುರಿಸುವಲ್ಲಿ ಅವು ವಿಫಲವಾಗಿವೆ. ಈ ವಾರದ ಅಂತ್ಯದ ವೇಳೆಗೆ ವಾತಾವರಣದ ಮೇಲ್ಪದರದ ಗಾಳಿಯ ಪ್ರಭಾವ ದುರ್ಬಲಗೊಂಡು, ಮುಂಗಾರು ಮಾರುತಗಳು ಮರಳಿ ಸಕ್ರಿಯವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮಾದರಿಗಳು ಮುನ್ಸೂಚನೆ ನೀಡಿವೆ. ಅಲ್ಲಿಯವರೆಗೆ ದೇಶದ ಬಹುತೇಕ ಭಾಗಗಳು ನೈರುತ್ಯ ಮುಂಗಾರಿನ ವ್ಯಾಪಕ ಮಳೆಗಾಗಿ ಕಾಯುವುದು ಅನಿವಾರ್ಯವಾಗಿದೆ.
