ಕೊಪ್ಪಳ ಬಲ್ಡೋಟ ವಿಸ್ತರಣೆ ಹಾಗೂ ಇತರೆ ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ ನಗರಸಭೆ ಮುಂದೆ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸೋಮವಾರ 200 ನೇ ದಿನಕ್ಕೆ ತಲುಪಿದ್ದು ಧರಣಿ ಸ್ಥಳದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೋರಾಟ ಬೆಂಬಲಿಸಲು ಅತಿಥಿಗಳಾಗಿ ಖ್ಯಾತ ಆರ್ಥ ಶಾಸ್ತ್ರಜ್ಞರು, ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಟಿ.ಆರ್.ಚಂದ್ರಶೇಖರ ಮತ್ತು ನಿರ್ಮಲ ತುಂಗಭದ್ರ ಆಂದೋಲನದ ಸಂಚಾಲಕ, ಗಂಗಾವತಿ ದುರ್ಗಮ್ಮನ ಹಳ್ಳ ಸ್ವಚ್ಛಗೊಳಿಸಿದ ಡಾ. ಶಿವಕುಮಾರ ಮಾಲಿಪಾಟೀಲ್ ಆಗಮಿಸುತ್ತಿದ್ದು, ಸಮಾವೇಶದಲ್ಲಿ ಕೊಪ್ಪಳ, ಭಾಗ್ಯನಗರ ಹಾಗೂ 22 ಕಾರ್ಖಾನೆ ಬಾಧಿತ ಹಳ್ಳಿಯ ರೈತರು, ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕೆಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಮನವಿ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ 10 ಗಂಟೆಗೆ ಬಸವೇಶ್ವರ ವೃತ್ತದ ಹತ್ತಿರ, ಫೋಕಸ್ ಮಾರ್ಟ್ ಹಿಂದೆ ಇರುವ ಪರಿಸರ ಅಧಿಕಾರಿಗಳ ಕಾರ್ಯಾಲಯದ ಮುಂದೆ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಶಾಶ್ವತವಾಗಿ ಮುಚ್ಚಲು ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನೆ ಮಾಡಲಾಗುವುದು. 199ನೇ ದಿನದಲ್ಲಿ ನಡೆದ ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ರವಿ ಕಾಂತನವರ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಎಸ್.ಬಿ.ರಾಜೂರು, ರಾಜಶೇಖರ ಏಳುಬಾವಿ, ಶಿವಾನಂದಯ್ಯ ಬೀಳಗಿಮಠ, ಮಹಾದೇವಪ್ಪ ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ, ನಟರಾಜ ಸವಡಿ, ವಿನಯ ಸಜ್ಜನ್, ಶಿವಪ್ಪ ಜಲ್ಲಿ, ವೆಂಕಟೇಶ, ನಾಗರಾಜ್ ಕುಷ್ಟಗಿ, ಅಬ್ದುಲ್ ರವೂಫ್, ರಸೀದ್ ಸಾಬ್, ಬಸರಾಜಪ್ಪ ಶೆಟ್ಟರ್, ಗಂಗಮ್ಮ ಕುರುಗೋಡು ಇದ್ದರು.
