ವಿಶ್ವಗುರು ಕಾಯಕ ಯೋಗಿ ಹಾಗೂ ಮಹಾನ್ ವಚನಕಾರರಾದ ಶ್ರೀ ಬಸವಣ್ಣ ಅವರ ಜಯಂತಿಯನ್ನು ಇಂದು ನ್ಯಾಷನಲ್ ಎಜುಕೇಶನ್ ಅಕಾಡೆಮಿ ವತಿಯಿಂದ ನಾಗರಬಾವಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಸ್ಮರಿಸಿ, ಇಂದಿನ ಸಮಾಜ ನಿರ್ಮಾಣದಲ್ಲಿ ಅವುಗಳ ಅಗತ್ಯತೆಯನ್ನು ವಿಶೇಷವಾಗಿ ಒತ್ತಿಹೇಳಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಆನಂದ್ ಸಿ ತಿರುಮಲ ಅವರು ಮಾತನಾಡಿ, “ಬಸವಣ್ಣ ಅವರು ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪರವಾಗಿದ್ದರು. ಅವರು ಪ್ರತಿಪಾದಿಸಿದ ‘ಕಾಯಕವೇ ಕೈಲಾಸ’ ತತ್ವವು ಇಂದಿನ ಯುವಜನತೆಗೆ ಮಾರ್ಗದರ್ಶಕವಾಗಿದೆ. ಅವರ ಆದರ್ಶಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಶ್ವತ ಬದಲಾವಣೆ ತರಲು ಸಾಧ್ಯ,” ಎಂದು ಹೇಳಿದರು.
ಕಾರ್ಯದರ್ಶಿ ರಂಗನಾಥ್ ಎಲ್ ಪಾತ್ರೊಟಿ ಅವರು ಮಾತನಾಡಿ, “ಬಸವಣ್ಣ ಅವರ ವಚನಗಳು ಕೇವಲ ಸಾಹಿತ್ಯವಲ್ಲ, ಜೀವನದ ದಾರಿದೀಪ. ಅವರ ಚಿಂತನೆಗಳು ಪ್ರತಿಯೊಬ್ಬರ ಬದುಕಿಗೆ ದಿಕ್ಕು ತೋರಿಸುವ ಶಕ್ತಿ ಹೊಂದಿವೆ,” ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಕನ್ಯಾ ಕುಮಾರಿ, ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ರಾಘವೇಂದ್ರ, ಪಿಎಚ್ಡಿ ಪದವೀಧರೆ ಮೀನಾಕ್ಷಿ ಎ, ಯುವ ನಾಯಕ ಗಗನ್ ವಿ, ಶಶಿಕಲಾ ಹಾಗೂ ಖ್ಯಾತ ಆಯುರ್ವೇದ ವೈದ್ಯರಾದ ಪಾಂಡುರಂಗ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಸವಣ್ಣ ಜಯಂತಿ ಅಂಗವಾಗಿ ವಿಶೇಷ ಪೂಜೆ, ವಚನ ಪಠಣ ಹಾಗೂ ಚಿಂತನೆಗಳ ವಿನಿಮಯ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮವು ಭಕ್ತಿಭಾವ ಮತ್ತು ಶಿಸ್ತಿನೊಂದಿಗೆ ಯಶಸ್ವಿಯಾಗಿ ನೆರವೇರಿತು.
