ಪೊಲೀಸರ ನಡೆಗೆ; ಸಾರ್ವಜನಿಕರ ಆಕ್ರೋಶ
ಹೊಸಪೇಟೆ, ಕೊಪ್ಪಳ: ತುಂಗಭದ್ರಾ ನದಿಯಲ್ಲಿ ಸುಮಾರು 40 ವರ್ಷದ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಶವವಿರುವ ಸ್ಥಳ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡು ಜಿಲ್ಲೆಗಳ ಪೊಲೀಸರು ಗಡಿ ವಾಗ್ವಾದಕ್ಕಿಳಿದ ಘಟನೆ ವಿಜಯನಗರ-ಕೊಪ್ಪಳ ಗಡಿಭಾಗದಲ್ಲಿ ಶುಕ್ರವಾರ ನಡೆದಿದೆ.
ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ತುಂಗಭದ್ರಾ ನದಿಯು ಗಡಿಯಾಗಿದ್ದು, ಉಭಯ ಜಿಲ್ಲೆಗಳು ನದಿಯ ಅರ್ಧಭಾಗವನ್ನು ಹಂಚಿಕೊಂಡಿವೆ. ಶುಕ್ರವಾರ ಬುಕ್ ಸಾಗರ ಸೇತುವೆಯ ಸಮೀಪ ನದಿಯಲ್ಲಿ ಶವ ತೇಲಿ ಬಂದಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ನದಿ ತೀರದಲ್ಲಿ ಸಾರ್ವಜನಿಕರು ಕಿಕ್ಕಿರಿದು ನಿಂತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿಜಯನಗರ ಜಿಲ್ಲೆಯ ಕಮಲಾಪುರ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆಯ ಸಿಬ್ಬಂದಿ, ಮೊದಲು ಮಾನವೀಯತೆ ಮೆರೆದು ಶವವನ್ನು ಹೊರತೆಗೆಯುವ ಬದಲು ಸ್ಥಳಾಧಿಕಾರ (ವ್ಯಾಪ್ತಿ) ಕುರಿತು ಕೆಲ ಕಾಲ ವಾಗ್ವಾದ ನಡೆಸಿದರು. ಶವ ಬಿದ್ದಿರುವ ಜಾಗ ತಮಗೆ ಸೇರಿದ್ದಲ್ಲ ಎಂದು ಉಭಯ ಠಾಣೆಯ ಪೊಲೀಸರು ಗೊಂದಲ ಸೃಷ್ಟಿಸಿಕೊಂಡಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಕೊನೆಗೆ ಕಮಲಾಪುರ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯವನ್ನು ಪಡೆದು ಶವವನ್ನು ನದಿಯಿಂದ ಹೊರತೆಗೆಸಿದ್ದಾರೆ. ಮೃತನ ಗುರುತು ಇನ್ನು ಪತ್ತೆಯಾಗಿಲ್ಲ. ಈ ಘಟನೆ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
