ಗಂಗಾಮತ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ತಿಪ್ಪಣ್ಣ ಕಮಕನೂರ ಅವರನ್ನು ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಗಂಗಾಮತ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ ರಾಜಶೇಖರ ಮುಸ್ಟೂರು ಹೇಳಿದರು.
ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಗಂಗಾಮತ ಸಮಾಜದ ವತಿಯಿಂದ ಬುಧವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ತಿಪ್ಪಣ್ಣ ಕಮಕನೂರ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ. ಅವರ ಶ್ರಮಕ್ಕೆ ತಕ್ಕಂತೆ ಪಕ್ಷ ಗೌರವ ನೀಡಬೇಕಾಗಿದೆ. ಹಾಗಾಗಿಯೇ ಅವರು ಎಂಎಲ್ಸಿ ಸ್ಥಾನದಲ್ಲಿ ಮುಂದುವರೆಸಬೇಕು. ಕಾಂಗ್ರೆಸ್ ಪಕ್ಷದ ನಾಯಕರನ್ನು ಒತ್ತಡ ಹಾಕಲು , ರಾಜ್ಯದ ವಿವಿಧ ಜಿಲ್ಲೆಗಳ ಗಂಗಾಮತ ಸಮಾಜದ ಮುಖಂಡರನ್ನು ಕರೆದುಕೊಂಡು ಬೆಂಗಳೂರಿಗೆ ನಿಯೋಗ ತೆರಳಿ ಪಕ್ಷದ ನಾಯಕರ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಗಂಗಾಮತ ಸಮಾಜವು ರಾಜ್ಯದಲ್ಲಿ ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದು, ಸಮಾಜದ ಪರವಾಗಿ ಧ್ವನಿ ಎತ್ತುವ ನಾಯಕರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಈ ಹಿನ್ನೆಲೆ ತಿಪ್ಪಣ್ಣ ಕಮಕನೂರ ಅವರನ್ನು ಎಂಎಲ್ಸಿ ಸ್ಥಾನದಲ್ಲಿ ಮುಂದುವರಿಸುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಮಾತನಾಡಿ, ತಿಪ್ಪಣ್ಣ ಕಮಕನೂರ ಅವರು ಕೇವಲ ಗಂಗಾಮತ ಸಮಾಜಕ್ಕಷ್ಟೇ ಅಲ್ಲದೆ, ಎಲ್ಲಾ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರು ಎಲ್ಲ ಸಮಾಜದವರ ಪ್ರೀತಿ ಹಾಗೂ ವಿಶ್ವಾಸ ಗಳಿಸಿರುವ ನಾಯಕರು. ಅಂತಹ ಹಿಂದುಳಿದ ವರ್ಗದ ನಾಯಕರನ್ನು ಪಕ್ಷ ಕೈಬಿಡಬಾರದು. ಎಂಎಲ್ಸಿ ಸ್ಥಾನದಿಂದ ಮುಂದುವರೆಸಬೇಕು.
ಇನ್ನೂ ಮುಂದಿನ ದಿನಮಾನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ತಿಪ್ಪಣ್ಣ ಕಮಕನೂರ ಅವರಿಗೆ ಸಚಿವ ಸ್ಥಾನ ನೀಡಬೇಕು. ಇದರಿಂದ ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ಅಧ್ಯಕ್ಷ ಹನುಮೇಶ ಭಟಾರಿ ಮಾತನಾಡಿ, ತಿಪ್ಪಣ್ಣ ಕಮಕನೂರ ಅವರು ಗಂಗಾಮತ ಸಮಾಜಕ್ಕ ಆಪಾರ ಕೊಡುಗೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರು ದುಡಿದಿರುವ ಶ್ರಮಕ್ಕೆ ಎಂಎಲ್ಸಿ ಸ್ಥಾನ ನೀಡಲಾಗಿದೆ. ಅವರ ಸ್ಥಾನಕ್ಕೆ ತಕ್ಕ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಎಂಎಲ್ಸಿ ನೀಡಿದೆ. ಅದನ್ನು ಮುಂದುವರೆಸಿದರೆ ನಮ್ಮ ಸಮಾಜಕ್ಕೆ ಗೌರವ ಸಲ್ಲಿಸಿದ್ದಂತೆ ಆಗುತ್ತದೆ. ಅದೇ ರೀತಿಯಾಗಿ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಹೇಳಿದ್ದರು.
ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಮಡ್ಡೇರ್, ಗೌರವ ಅಧ್ಯಕ್ಷ ಹುಲಗಪ್ಪ ಕಾಪು, ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘ ಅಧ್ಯಕ್ಷ ಭೈರೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
