ಕುಷ್ಟಗಿ ಗಾಳಿ ಮತ್ತು ನೀರು ಮಾನವನ ಜೀವನದ ಪ್ರಮುಖ ಆಧಾರಗಳಾಗಿದ್ದು, ಯುವಕರು ಪ್ರಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ತುಂಗಭದ್ರಾ ಯೋಜನೆ ಕಾಡಾ ನಿಗಮದ ಅಧ್ಯಕ್ಷರು ಹಾಗೂ ಕುಷ್ಟಗಿ ತಾಲೂಕು ಪಂಚ ಕಮಿಟಿ ಅಧ್ಯಕ್ಷರಾದ ಹಸನಸಾಬ ದೋಟಿಹಾಳ ಹೇಳಿದರು.
ಪಟ್ಟಣದ ಈದ್ಗಾ ಮೈದಾನದ ಸಮೀಪದ ಹಳೆ ನಿಡಶೇಸಿ ರಸ್ತೆಯಲ್ಲಿರುವ ಖಬರಸ್ತಾನದಲ್ಲಿ ನೂತನ ಗೇಟ್ ಹಾಗೂ ನಾಮಫಲಕ ಉದ್ಘಾಟನೆ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು ಸಮಾಜದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಬೇಕಿದ್ದು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಅದರ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಕಾರ್ಯನಿರ್ವಹಿಸಬೇಕು. ಸಮಾಜಮುಖಿ ಕೆಲಸಗಳಿಗೆ ಯುವಕರು ಹೆಚ್ಚಿನ ಆಸಕ್ತಿ ತೋರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಖಬರಸ್ತಾನ ಕಮಿಟಿಯ ಯುವಕರ ತಂಡವನ್ನು ಅವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಖಬರಸ್ತಾನಕ್ಕೆ ಉಚಿತವಾಗಿ ಗೇಟ್ ಮತ್ತು ನಾಮಫಲಕವನ್ನು ದೇಣಿಗೆಯಾಗಿ ನೀಡಿದ ಸಮಾಜದ ಮುಖಂಡರಾದ ಕರೀಂಸಾಬ ಚೌಧರಿ ಅವರನ್ನು ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಪರಿಸರ ಸಂರಕ್ಷಣೆಯ ಅಂಗವಾಗಿ ಖಬರಸ್ತಾನ ಆವರಣದಲ್ಲಿ ಸುಮಾರು 200 ರಿಂದ 300 ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು. ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ನಜೀರ್ ಸಾಬ ಮೂಲಿಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಮೀರ್ ಟೆಕ್ಕಳಿಕಿ, ಸೈಯದ್ ಆಟೋ, ತಾಹೇರ್ ಕಪಾಲಿ, ಆಲಂ ಕಲ್ಬುರ್ಗಿ, ಆಸಿಫ್ ಗಂಧಣೆ, ಮೇಹಬೂಬ ವಾಲಿಕಾರ್, ರಹೀಮ್ ಚೌದರಿ, ನೂರಾ ಅಹ್ಮದ್, ಇಜಾಜ್ ಕಪಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
